== ಕ್ಷಿತಿಜ ನೇಸರಧಾಮ == ಕ್ಷಿತಿಜ ನೇಸರ ಧಾಮವು ಉಡುಪಿಯಿಂದ ೭೫ ಕಿಮೀ ದೂರದಲ್ಲಿರುವ ಒಟ್ಟಿನಾಣೆಯಲ್ಲಿರುವ ಪ್ರಕೃತಿ ಸೌಂದರ್ಯದ ಸ್ಥಳವಾಗಿದೆ.ಸೋಮೇಶ್ವರ ಕಡಲತೀರಕ್ಕೆ ತಾಕಿಕೊಂಡಿರುವ ಗುಡ್ಡ ಒತ್ತಿನೆಣೆ. ಬೈಂದೂರು ತಾಲೂಕು ಪಡುವರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕ್ಷಿತಿಜಾ ನೇಸರಧಾಮವಿದೆ, ಈ ಸ್ಥಳವು ತಾಳೆ ಮರಗಳು ಮತ್ತು ತೆಂಗಿನಕಾಯಿಗಳ ಸೊಂಪಾದ ಉಷ್ಣವಲಯದ ಎಲೆಗೊಂಚಲುಗಳ ನಡುವೆ ನೆಲೆಸಿದೆ, ಹಲವು ಬಗೆಯ ಔಷದೀಯ ಸಸ್ಯಗಳು, ಅಪರೂಪದ ಮರಗಿಡಗಳು ಈ ಭಾಗದಲ್ಲಿವೆ. ಸಮುದ್ರ ಮಟ್ಟದಿಂದ ಸುಮಾರು ೨೦೦ ಅಡಿ ಎತ್ತರದಲ್ಲಿರುವ ನೇಸರಧಾಮದ ತುದಿಯಿಂದ ಅರೇಬಿಯನ್ ಸಮುದ್ರ ವೀಕ್ಷಣೆ, ಸಮುದ್ರ ನದಿಗಳು ಸೇರುವ ದೃಶ್ಯ, ಸೂರ್ಯಾಸ್ತಮಾನವನ್ನು ನೋಡಬಹುದು. ಸಮುದ್ರದ ಸೊಬಗನ್ನು ನೋಡುವ ಸಲುವಾಗಿ ಅರಣ್ಯ ಇಲಾಖೆ ೧೯೯೬ರಲ್ಲಿ ಒತ್ತಿನೆಣೆಯಲ್ಲಿ ಕ್ಷಿತಿಜ ನೇಸರಧಾಮವನ್ನು ನಿರ್ಮಿಸಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಕ್ಷಿತಿಜ ನೇಸರ ಧಾಮ, ಬೈಂದೂರು ನಗರದಿಂದ ೪ಕಿ.ಮೀ ಇದ್ದು, ಪಶ್ಚಿಮಾಭಿಮುಖವಾಗಿ ಸಾಗಬೇಕು. ಬಸ್ಸು,ರಿಕ್ಷಾಗಳ ವ್ಯವಸ್ಥೆ ಇರುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ೨ ಕಿ.ಮೀ ದೂರದಲ್ಲಿರುವ ಕ್ಷಿತಿಜ ನೇಸರಧಾಮಕ್ಕೆ ಹೋಗಲು ಅರ್ಧ ಕಿ.ಮೀ ಮಣ್ಣಿನ ರಸ್ತೆಯಲ್ಲಿ ಸಾಗಬೇಕು. ಬೈಂದೂರು ಪ್ರವಾಸೋದ್ಯಮ ಬೆಳವಣಿಗೆ ಅರಣ್ಯ ಇಲಾಖೆಯ ಕೊಡುಗೆಯಾಗಿದೆ. ಬೈಂದೂರು ಸುರಕ್ಷತಾ ಅರಣ್ಯದ ವಿಸ್ತರಣಾ ಕ್ಷೇತ್ರದಲ್ಲಿ ೧೦ ಹೆಕ್ಟೇರ್ ನಲ್ಲಿ ಬೆಳೆದ ಗಿಡಗಳ ನಡುವೆ ಈ ಧಾಮವಿದೆ. ಸಮುದ್ರ ತೀರಕ್ಕೆ ಹೋಗುವ ಅವಕಾಶವಿದೆ, ಅದಕ್ಕೆ ಸಾರ್ವಜನಿಕರಿಗೆ ೧೦ರೂ ಮತ್ತು ಮಕ್ಕಳಿಗೆ ೫ರೂ ವಿಧಿಸುತ್ತಾರೆ. ಕೊಠಡಿಗಳಿಗೆ ೧೦೦೦ದಿಂದ ೧೭೦೦ವರೆಗೆ ದರವಿದೆ. == ವ್ಯವಸ್ಥೆಗಳು == ಇಲ್ಲಿ ಎರಡು ಹವಾನಿಯಂತ್ರಿತ ಕುಟೀರ , ಐದು ಸಾಮಾನ್ಯ ಕುಟೀರ ಹಾಗೂ ಫಲಹಾರ ಮಂದಿರ ಇದೆ. ಸೂರ್ಯಾಸ್ತಮಾನ ವೀಕ್ಷಣೆಗೆ ಅಟ್ಟಳಿಗೆಯಿದೆ. ಇಲ್ಲಿಂದ ಕೆಳಕ್ಕೆ ಬರಲು ಮೆಟ್ಟಿಲಿನ ವ್ಯವಸ್ಥೆ ಇದ್ದು ಅಲ್ಲಿಂದಲೇ ರಸ್ತೆಯನ್ನು ದಾಟಿ ಸೋಮೇಶ್ವರ ಸಮುದ್ರ ತೀರಕ್ಕೆ ಹೋಗಬಹುದು. ಚಿಣ್ಣರ ಪಾರ್ಕ್ ಇದೆ. ವಿವಿಧ ಜಾತಿಯ ಸಸ್ಯವೃಕ್ಷಗಳು ಹಾಗೂ ಅವುಗಳ ಕುರಿತು ಮಾಹಿತಿ, ಪರಿಸರ ವಾತವರಣಕ್ಕೆ ಸಂಬಂಧಿಸಿದ ಮಾಹಿತಿಗಳಿವೆ. == ಉಲ್ಲೇಖಗಳು ==